August 19, 2021

ಮಣ್ಣಿನ ಮಗನ ಹೊಸ ಸಂಶೋಧನೆ ಸೋಲಾರ್ ಕೀಟನಾಶಕ


    ನೆಟ್ಟ ಬೆಳೆ ಚಿಗುರೊಡೆದರೆ ರೈತರ ಮೊಗದಲ್ಲಿ ಸಂತಸವೊಂದು ಮೂಡುತ್ತದೆ. ಹೃದಯದಲ್ಲಿ ಅನಂದವು ಅನಾವರಣವಾಗುತ್ತದೆ. ನೆಲವನ್ನು ಉತ್ತಿ ಬಿತ್ತಿದ ಸಾರ್ಥಕದ ಭಾವವೊಂದು ತೆನೆಯೊಡೆಯುತ್ತದೆ. ನೆಮ್ಮದಿಯ ನಿದ್ರೆಯೊಂದು ಅವನೊಳ್ಳಗೆ ಜೀಕುತ್ತದೆ. ಬದುಕಿನ ಚಿತ್ತಾರಗಳ ಕನಸುಗಳು ಹೆಣೆದು ಕೊಳ್ಳುತ್ತವೆ. ಆದರೆ ಬೆಳಿಗ್ಗೆ ಎದ್ದು ನೆಟ್ಟ ಬೆಳೆಯ ಮೊಗ್ಗು ಕೀಟದ ಹಾವಳಿಯಿಂದ ಧ್ವಂಸವಾದಾಗ ರೈತರ ಸಂಕಟಕ್ಕೆ ಪದಗಳೇ ಇಲ್ಲ. ಕನಸು ಕಂಡ ಕಣ್ಣು ಒದ್ದೆಯಾಗಿರುತ್ತದೆ. ಕೀಟಗಳ ಹಾವಳಿಗೆ ಅವನ ಬದುಕು ನಜ್ಜುಗುಜ್ಜಾಗಿರುತ್ತದೆ.

  ಹೌದು ರೈತರ ಬಾಳನ್ನು ಕೀಟಗಳು ಹೈರಾಣ ಮಾಡುವಷ್ಟು ಬೇರೆನೂ ಮಾಡುವುದಿಲ್ಲ. ಕೀಟಗಳ ನಿಯಂತ್ರಣಕ್ಕೆ ಅವಾಹ್ಯತವಾಗಿ ಪ್ರಯೋಗಗಳು ಜರುಗುತ್ತಲೇ ಇವೆ. ಹೊಸ ಹೊಸ ಸಂಶೋಧನೆಗಳು ಅಗುತ್ತಲೇ ಇದೆ. ಅದರೂ ಕ್ರೀಟಾಭಾದೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಹರಿಹರದ ಮಲೆಬೆನ್ನೂರಿನ ರೈತ ಕರಿಬಸಪ್ಪ ಕೀಟಭಾದೆಗೆ ಶೋಧಿಸಿರುವ ಸೋಲಾರ್ ಕ್ರೀಟಾನಾಶಕ ಕೃಷಿ ಕ್ಷೇತ್ರದಲ್ಲಿ ಹೊಸದೊಂದು ಭರವಸೆಯನ್ನು ಮೂಡಿಸಿದೆ.  ರಸಾಯನಿಕವನ್ನು ಬಳಸದೇ ಕೀಟ ನಿಯಂತ್ರಣವನ್ನು ಮಾಡುವ ಈ ವಿದಾನ ಇಡೀ ದೇಶವೇ ಅವರತ್ತ ನೋಡುವಂತೆ ಮಾಡಿದೆ.



    ಮೂಲತಃ ರೈತನಾಗಿರುವ ಕರಿಬಸಪ್ಪ ತಮ್ಮ ಐದು ಎಕರೆ ಜಮೀನಿನಲ್ಲಿ ಅಡಿಕೆ,ಮಾವು,ರಾಮಫಲ,ಲಕ್ಷಣಫಲ,ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದರು. ಕೀಟಗಳು ಮೊಗ್ಗನ್ನು ಕತ್ತರಿಸಿ ಬಿಡುವುದು,ಕಾಂಡವನ್ನು ಕೊರೆದು ಬಿಡುವುದು,ಎಲೆಗಳನ್ನು ತಿನ್ನುವುದು,ತೆಂಗಿನ ಗರಿಯನ್ನು ಕತ್ತರಿಸಿ ಬಿಡುವುದು,ಅಡಿಕೆ ಮರದಲ್ಲಿ ಚಿಗುರಿದ ಸುಳಿಯನ್ನು ತಿಂದು ಬಿಡುವುದು ಇಂತಹ ಅನೇಕ ಕೀಟಗಳ ಉಪಟಳದಿಂದ ಕರಿ ಬಸಪ್ಪ ದೃತಿ ಗೆಟ್ಟರು. ಕೀಟನಾಶಕವನ್ನು ಟಾನ್‍ಗಟ್ಟಲೇ ತಂದು ಸಿಂಪಡಿಸಿದರು. ಕೈ ಖಾಲಿಯಾದಾಗ ಸಾಲ ಮಾಡಿದರು. ಸಾಲ ತೀರಿಸಲು ಅಗದೇ ಇದ್ದಾಗ ಅತ್ಮಹತ್ಯೆಯ ಯೋಚನೆಯೊಂದು ಅವರಲ್ಲಿ ಸುಳಿಯಿತ್ತು. 

   ಕರಿಬಸಪ್ಪನವರು ರಾತ್ರಿ ಹೊತ್ತು ಬೆಳೆಗಳಿಗೆ ನೀರು ಕಟ್ಟಲು ಸೋಲಾರ್ ದೀಪವನ್ನು ಇರಿಸಿಕೊಂಡಿದ್ದರು.ಅಂದೊಂದು ಸಂಜೆ ಬೆಳೆಗಳಿಗೆ ನೀರು ಉಣಿಸಿ ಸೋಲಾರ್ ಲೈಟ್‍ನ್ನು ತೋಟದ ತೊಟ್ಟಿಯ ಮೇಲೆ ಇಟ್ಟು ಮನೆಗೆ ಮರಳಿದರು. ಬೆಳಿಗ್ಗೆ ತೋಟಕ್ಕೆ ಹೋದಾಗ ಅಚ್ಚರಿಯೊಂದು ಅವರಿಗೆ ಕಾದಿತ್ತು. ತೊಟ್ಟಿಯ ಒಳಗೆ ಅನೇಕ ಕೀಟಗಳು ಬಿದ್ದು ಸತ್ತು ಹೋಗಿದ್ದವು. ಒಂದು ಕ್ಷಣ ಅಚ್ಚರಿ ಗಲಿಬಲಿಗೊಂಡ ಅವರಿಗೆ ಅನೇಕ ಕುತೂಹಲಗಳು ಹುಟ್ಟಿಕೊಂಡವು. ಮರು ದಿವಸ ಉದ್ದೇಶ ಪೂರ್ವಕವಾಗಿಯೇ ಸೋಲಾರ್ ದೀಪವನ್ನು ಹೊತ್ತಿಸಿ ಹೋದರು. ಬೆಳಿಗ್ಗೆ ಮತ್ತೆ ಅದೇ ಅಚ್ಚರಿ ಅವರಿಗೆ ಕಾದಿತ್ತು. ಅಲ್ಪ ಪ್ರಮಾಣದಲ್ಲಿ ಕೀಟಗಳು ಬಿದ್ದು ತೊಟ್ಟಿಯಲ್ಲಿ ಸತ್ತಿದ್ದವು.ಈ ಬೆಳವಣಿಗೆಯ ಜಾಡು ಹತ್ತಿದ ಕರಿಬಸಪ್ಪ  ಎರಡು ವರ್ಷಗಳ ಕಾಲ ಅನೇಕ ಪ್ರಯೋಗಳನ್ನು ಮಾಡಿ ಕೊನೆಗೆ ಸೋಲಾರ್ ಕೀಟನಾಶಕ ಯಂತ್ರವನ್ನು ಸಿದ್ದಪಡಿಸಿದರು. 



    ಕರಿಬಸಪ್ಪನವರ ಈ ಸೋಲಾರ್ ಕೀಟನಾಶಕ ಯಂತ್ರವು ಬೆಳೆಗಳಿಗೆ ಸಿಂಪರಿಸುವ ರಸಾಯನಿಕದಿಂದ ಬೆಳೆಯನ್ನು ದೂರವಿರಿಸುತ್ತದೆ. ರೈತರ ಸಮಯ ಮತ್ತು ಹಣ ಎರಡು ಉಳಿತಾಯವಾಗುತ್ತದೆ. ಈಗಾಗಲೇ ರಾಜ್ಯದ ಐನ್ನೂರುಕ್ಕೂ ಹೆಚ್ಚು ರೈತರು ಇದನ್ನು ಅಳವಡಿಸಿಕೊಂಡು ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದಾರೆ. 

  ಯಂತ್ರದ ನಿರ್ವಹಣೆ ಬಲು ಸುಲಭ

    ಎರಡು ವರ್ಷಗಳ ಕಾಲ ಬೇರೆ ಬೇರೆ ಅಯಾಮಗಳಲ್ಲಿ ಪ್ರಯೋಗಗಳನ್ನು ಮಾಡಿದ ಕರಿ ಬಸಪ್ಪನವರು ಸುಲಭವಾಗಿ ನಿರ್ವಹಣೆ ಮಾಡುವ ರೀತಿ ಸೋಲಾರ್ ಯಂತ್ರವನ್ನು ವಿನ್ಯಾಸಗೊಳಿಸಿದ್ದಾರೆ. ಸುಮಾರು ಆರು ಅಡಿ ಎತ್ತರದ ಕಬ್ಬಿಣದ ಮೇಲೆ ಬೀದಿ ದೀಪದ ಮಾದರಿಯಂತೆ ಸೋಲಾರ್ ದೀಪವನ್ನು ಜೋಡಿಸಲಾಗಿದೆ. ಕಬ್ಬಿಣದ ತುದಿಯ ಮೇಲೆ ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸಿ,ದೀಪದ ಕೆಳಗೆ ಒಂದೂವರೆ ಅಡಿ ಅಂತರದಲ್ಲಿ ಬಕೆಟ್‍ನ್ನು ಇರಿಸಲಾಗಿದೆ. ಸೋಲಾರ್ ಪ್ಯಾನಲ್‍ಗಳು ಸೂರ್ಯನ ಬೆಳಕಿಗೆ ಚಾರ್ಜ್ ಅಗುತ್ತವೆ. ಸಂಜೆ ಅರು ಘಂಟೆಯ ಸುಮಾರಿಗೆ ಸೂರ್ಯ ಮುಳುಗಿದ ಕೂಡಲೇ ಎಲ್.ಇ.ಡಿ. ಬಲ್ಪ್‍ಗಳು ಯಾರ ಸಹಾಯವಿಲ್ಲದೇ ತನ್ನಷ್ಟಕ್ಕೆ ತಾನು ಉರಿಯಲಾರಂಭಿಸಿತ್ತದೆ. ಸಂಜೆ 6ರಿಂದ ರಾತ್ರಿ ಹತ್ತರ ತನಕ ಶತ್ರು ಕೀಟಗಳು ಓಡಾಡುತ್ತಾವೆ. ಅವುಗಳು ಸೋಲಾರ್ ಬಲ್ಪ್‍ಗಳ ಅರ್ಕಷಣೆಗೆ ಒಳಗಾಗಿ  ಹಾರಾಡಿ ಸೋಲಾರ್ ದೀಪದ ಕೆಳಗೆ ಇರುವ ಬಕೆಟ್ ನೀರಿನಲ್ಲಿ ಬಿದ್ದು ಸಾಯುತ್ತವೆ. ರಾತ್ರಿ ಹತ್ತರ ಮೇಲೆ ಮಿತ್ರ ಕೀಟಗಳು ಓಡಾಡುವುದರಿಂದ ಸೋಲಾರ್ ಬಲ್ಪ್‍ಗಳು ತನ್ನಷ್ಟಕ್ಕೇ ತಾನು ಸ್ಥಗಿತಗೊಳ್ಳುತ್ತದೆ. 

    ರೈತರು ಈ ಯಂತ್ರವನ್ನು ಸುಲಭವಾಗಿ ಕೊಂಡೊಯ್ಯಬಹುದು. ಮಾತ್ರವಲ್ಲ ಬೆಳಿಗ್ಗೆ ಎದ್ದು ಬಕೆಟ್‍ನಲ್ಲಿ ಬಿದ್ದ ಕೀಟಗಳನ್ನು ಹೊರಗೆ ಚೆಲ್ಲಿ ಪುನಃ ನೀರು ಇಟ್ಟರೆ ಸಾಕು.ರಸಾಯನಿಕವನ್ನು ಸಿಂಪಡಿಸಬೇಕಿಲ್ಲ. ಕ್ರೀಮಿನಾಶಕಕ್ಕೆ ದುಡ್ಡು ಸುರಿಯಬೇಕಿಲ್ಲ.ಸಾಲದ ಭಾದೆಯು ಇರುವುದಿಲ್ಲ. ಒಂದು ಯಂತ್ರ ಐದಾರು ವರ್ಷಗಳ ಕಾಲ ಬಳಕೆ ಬರುತ್ತದೆ.  ಒಂದು ಎಕೆರೆಗೆ ಒಂದು ಯಂತ್ರ ಸಾಕು ಎನ್ನುವುರು ಕರಿಬಸಪ್ಪನವರ ಸಲಹೆ.

    ರೈತರ ಸಮಸ್ಯೆಯ ಬಗ್ಗೆ ರೈತನೇ ಸಂಶೋಧಿಸಿರುವ ಈ ಯಂತ್ರ ಇಡೀ ದೇಶದ ಕೃಷಿ ವಲಯದಲ್ಲಿ ಸದ್ದು ಮಾಡುತ್ತಿದೆ. ಕನ್ನಡ ನಾಡಿನ ರೈತನ ಈ ಸಂಶೋಧನೆಗೆ ನಾವು ಬೆನ್ನು ತಟ್ಟಬೇಕಾಗಿದೆ,ಪ್ರೋತ್ಸಾಹಿಸಬೇಕಾಗಿದೆ.

ಹೆಚ್ಚಿನ ಮಾಹಿತಿಗೆ ಕರಿಬಸಪ್ಪನವರ ಪೋನ್ ನಂಬರ್ :98809-73218

                *

ದಾಳಿಂಬೆ ಫಲ ಕೈಗೆ ಸಿಕ್ಕಿತ್ತು



    ಶಿವಮೊಗ್ಗ ಜಿಲ್ಲೆಯ ಕಡೂರಿನಲ್ಲಿದ್ದ ಐದು ಎಕರೆ ಜಮೀನಿನಲ್ಲಿ ನಾನು ದಾಳಿಂಬೆಯನ್ನು ಹಾಕಿದೆ. ಮೊದಲ ವರ್ಷ ಐದು ಎಕರೆ ದಾಳಿಂಬೆ ಗಿಡಗಳಿಗೆ ಸಿಂಪಡಿಸಿದ ಕೀಟನಾಶಕದ ಒಟ್ಟು ದುಡ್ಡ ಒಂದೂವರೆ ಲಕ್ಷ. ದಾಳಿಂಬೆ ಗಿಡಗಳಿಗೆ ಕೀಟಗಳ ಹಾವಳಿ ಹೆಚ್ಚು. ಪ್ರತಿ ಏಳು ದಿನಗಳಿಗೆ ಒಮ್ಮೆಯಾದರೂ ಕೀಟನಾಶಕವನ್ನು ಸಿಂಪಡಿಸಬೇಕು. ಇಲ್ಲದಿದ್ದರೆ ದಾಳಿಂಬೆ ಹೂವನ್ನು ಮೊಗ್ಗನ್ನು ಕೀಟಗಳು ಧ್ವಂಸ ಮಾಡಿ ಬಿಡುತ್ತದೆ. ಏಳು ದಿನಗಳಿಗೆ ಒಮ್ಮೆ ಕೀಟನಾಶಕವನ್ನು ಸಿಂಪಡಿಸಲು ಲಕ್ಷಗಳನ್ನು ನಾನು ಸುರಿಯಲೇ ಬೇಕಾಗಿತ್ತು. ಮೊದಲ ವರ್ಷ ಒಳ್ಳೆಯ ಬೆಳೆ ನನಗೆ ಬರಲಿಲ್ಲ. ದಾಳಿಂಬೆ ಹಾಕ ಬಾರದಿತ್ತು ತಪ್ಪು ನಿರ್ಧಾರ ಮಾಡಿದೆ ಎಂದು ಅನೇಕ ಸಾರಿ ಯೋಚನೆ ಮಾಡಿದೆ. 

   ಕೀಟಗಳ ನಿಯಂತ್ರಣಕ್ಕೆ ಬೇರೆ ಮಾರ್ಗವನ್ನು ಅನುಸರಿಸ ಬೇಕೆಂದು ಪರಿಚಯಸ್ಥರ ಬಳಿ ನನ್ನ ನೋವನ್ನು ಹೇಳಿ ಕೊಳ್ಳುತ್ತಿದ್ದೆ. ಗೆಳೆಯನೊಬ್ಬ ಬೇವಿನ ಎಣ್ಣೆ,ಮತ್ತು ಗೋಮೂತ್ರದ ಮೂಲಕ ಕೀಟಗಳನ್ನು ನಿಯಂತ್ರಣ ಮಾಡಬಹುದು ಎಂದು ಸಲಹೆ ನೀಡಿದ. ಎರಡನೇಯ ವರ್ಷ ಆ ಕ್ರಮದಲ್ಲಿಯೇ ದಾಳಿಂಬೆ ಗಿಡಗಳಿಗೆ ಔಷಧಿ ಸಿಂಪಡಿಸಿದೆ. ಕೊಂಚ ಮಟ್ಟಿನ ಕೀಟಗಳ ಹಾವಳಿ ತಪ್ಪಿತ್ತು. ಆದರೆ ವಿಪರೀತ ಮಳೆಯಿಂದ ದಾಳಿಂಬೆ ಕೈ ತಪ್ಪಿ ಹೋಯಿತ್ತು. ಕೈ ಸುಟ್ಟುಕೊಂಡೆ.

  ತೋಟಕ್ಕೆ ಬೇರೆ ಬೆಳೆಯನ್ನು ಹಾಕುವ ನಿರ್ಧಾರವೊಂದು ಮನದಲ್ಲಿ ಹುಟ್ಟಿತ್ತು. ಬೇಡಪ್ಪ ಈ ಹಾಳು ದಾಳಿಂಬೆ ಎನ್ನುವಾಗ ಶಿವಮೊಗ್ಗದ ಮಿತ್ರನೊಬ್ಬ ಸೋಲಾರ್ ಕೀಟನಾಶಕ ಯಂತ್ರದ ಬಗ್ಗೆ ಹೇಳಿದ.ಮೊದಲು ಅನುಮಾನ ಬಂತು. ಅಯ್ಯೋ ದುಬಾರಿ ಕೀಟನಾಶಕವನ್ನು ತಂದು ಸಿಂಪಡಿಸಿದರೂ ನಿಯಂತ್ರಣಕ್ಕೆ ಬಾರದ ಈ ಕೀಟಗಳು ಈ ಸೋಲಾರ್ ದೀಪಕ್ಕೆ ಬಗ್ಗುತ್ತವೆಯೋ? ಎನ್ನುವ ಪ್ರಶ್ನೆ ಇಟ್ಟುಕೊಂಡೆ ಮೊದಲು ನಾಲ್ಕು ಯಂತ್ರವನ್ನು ಹಾಕಿದೆ.

    ನಿಜಕ್ಕೂ ಅಚ್ಚರಿಯಾಯಿತ್ತು. ಮೊದಲೇ ದಿನವೇ ರಾಶಿಗಟ್ಟಲೇ ಕೀಟಗಳು ಬಿದ್ದು ಹೋಗಿದ್ದವು. ಬೆಳೆಯಲ್ಲಿ ಎನೋ ಒಂದು ಸೊಬಗು ಇತ್ತು. ಏಳು ದಿನಗಳಿಗೆ ಒಮ್ಮೆ ಸಿಂಪಡಿಸುತ್ತಿದ್ದ ಕೀಟನಾಶಕವನ್ನು ಈ ಸಾರಿ ಸಿಂಪಡಿಸಿಲ್ಲ. ಆದರೆ ಗಿಡಗಳಲ್ಲಿ ದಾಳಿಂಬೆ ನಳನಳಿಸಿದೆ. ಕೀಟಗಳ ಹಾವಳಿ ತಪ್ಪಿದೆ. 120 ರೂಪಾಯಿಗಳಂತೆ ದಾಳಿಂಬೆಯನ್ನು ಮಾರಾಟ ಮಾಡಿದ್ದೀನಿ. ಭೂಮಿಗೆ ಕೀಟನಾಶಕ ಸಿಂಪಡಿಸಿ ಸಿಂಪಡಿಸಿ ಒಣಗಿದ ಭೂಮಿಯಂತೆ ಕಾಣುತ್ತಿತ್ತು. ಆದರೆ ಈಗ ಭೂಮಿಯಲ್ಲಿ ಹಸಿರು ಚಿಗುರೊಡಿದೆ. ಎರಡು ವರ್ಷಗಳಲ್ಲಿ ಕಳೆದು ಕಂಡ ದುಡ್ಡು ಈ ಬಾರಿ ಮರಳಿ ಬಂದಿದೆ. ಸೋಲಾರ್ ಕೀಟನಾಶಕ ಯಂತ್ರವು ಕೃಷಿ ಮಾಡಲು ಒಂದಿಷ್ಟು ಶಕ್ತಿ ನೀಡಿದೆ. ರೈತರ ಪಾಲಿಗೆ ಇದು ಅಶಾ ಕಿರಣ.

ಜಿ.ಎನ್.ರವಿ {98451-44188} 

ಪ್ರಗತಿ ಪರ ಕೃಷಿಕ ಶಿವಮೊಗ್ಗ 

             *

ಭತ್ತಕ್ಕೆ ಬಂಪರು ಇಳುವರಿ ಬಂತು



   ನನ್ನೂರು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೆಬೆನ್ನೂರು. ನಮ್ಮದ್ದು ಒಟ್ಟು ಹನ್ನೇರಡು ಎಕರೆ ಜಮೀನಿದೆ. ಐದು ಎಕರೆ ಭತ್ತವನ್ನು,ಎರಡು ಎಕರೆ ಅಡಿಕೆಯನ್ನು,ಆರು ಎಕರೆ ಸೂರ್ಯಕಾಂತಿಯನ್ನು ಹಾಕಿದ್ದೀವಿ. ಎಲ್ಲ ರೈತರಂತೆ ನಾವು ಬೆಳೆಗಳಿಗೆ ಕೀಟನಾಶಕವನ್ನು ಕಾಲ ಕಾಲಕ್ಕೆ ಸಿಂಪಡಿಸುತ್ತ ಇದ್ದೀವಿ. ಒಂದು ಎಕರೆಗೆ ಹನ್ನೇರಡರಿಂದ 13 ಸಾವಿರದಷ್ಟು ಕೀಟನಾಶಕದ ಖರ್ಚು ಬರುತ್ತಿತ್ತು. ಬೆಳೆಗಳಿಗೆ ಐದಾರು ಸಾರಿ ಕೀಟನಾಶಕವನ್ನು ಸಿಂಪಡಿಸುತ್ತಿದ್ದೀವಿ. ಅಷ್ಟು ಸಾರಿ ಸಿಂಪಡಿಸಿದರೆ ಮಾತ್ರ ಭತ್ತದ ಬೆಳೆ ಶೇಕಡ ಮೂವತ್ತರಿಂದ ನಲವತ್ತುರಷು ಕೈಗೆ ಸಿಗುತ್ತಿತ್ತು.

    ನಮ್ಮ ಕುಟುಂಬದ ಅಪ್ತರಿಂದ ಸೋಲಾರ್ ಕೀಟನಾಶಕ ಯಂತ್ರದ ಪರಿಚಯವಾಯಿತ್ತು. ತುಸು ಅನುಮಾನದಿಂದಲೇ ಇದನ್ನು ಮೊದಲು ಒಂದು ಖರೀದಿಸಿ ಒಂದು ಎಕರೆಗೆ ಅಳವಡಿಸಿದೆ. ಪ್ರತಿ ದಿನ ಬೀಳುತ್ತಿದ್ದ ಕೀಟಗಳಿಗೆ ನಾನು ಮಾರು ಹೋದೆ. ಒಂದು ಎಕರೆಯ ಭತ್ತದ ತೆನೆಗಳು ಉಳಿದ ಭತ್ತದ ತೆನೆಗಳಿಂತ ತುಸು ದಪ್ಪವಾಗಿ ಬೆಳೆದವು. ಈ ಬೆಳವಣಿಗೆಯಿಂದ ಉಳಿದ ಎಲ್ಲ ಬೆಳೆಗಳಿಗೆ ಸೋಲಾರ್ ಕೀಟನಾಶಕದ ಯಂತ್ರವನ್ನು ಹಾಕಿದೆ. ಒಂದು ಎಕರೆಗೆ 30 ಮೂಟೆ ಬರುತ್ತಿದ್ದ ಭತ್ತ,ಸೋಲಾರ್ ಯಂತ್ರವನ್ನು ಹಾಕಿದ ಮೇಲೆ 45 ರಿಂದ 47 ಮೂಟೆ ಬರುತ್ತಿದೆ.

    ಈಗ ಯಾವುದೇ ಕೀಟನಾಶಕವನ್ನು ನಾನು ಸಿಂಪಡಿಸುತ್ತಿಲ್ಲ. ಸೂರ್ಯಕಾಂತಿ ಬೆಳೆ ಪೂರ್ಣವಾಗಿ ಕೈಗೆ ಸಿಕ್ಕಿದೆ. ನಿಜಕ್ಕೂ ಇದು ರೈತರ ಪಾಲಿಗೆ ವರದಾನವಾಗಿದೆ.

ಪೂಜಾರ ಗಂಗೆನಳ್ಳೆಪ್ಪ {91102-21947]   ಪ್ರಗತಿ ಪರ ಕೃಷಿಕ.  ಮಲೆಬೆನ್ನೂರು

*




2 comments:

  1. ಹೃತ್ಪೂರ್ವಕ ಧನ್ಯವಾದಗಳು ಸರ್. ಕ್ರಿಮಿನಾಶಕ ಮುಕ್ತ ಬೆಳೆ ಬೆಳೆಯಲು ರೈತರಿಗೆ ಸಹಾಯವಾಗುತ್ತದೆ.

    ReplyDelete
  2. ನಿಜವಾಗಿಯೂ ವಿಜ್ಞಾನಿಗಳು ಮಾತ್ರ ಸಂಶೋಧನೆ ಮಾಡುವರು ಅಂದುಕೊಂಡವರಿಗೊಂದು ಉದಾಹರಣೆ ಈ ರೈತ. ನಿಜವಾದ ಬುದ್ಧಿವಂತಿಕೆ ಇದ್ದರೆ ಯಾರಾದರೂ ಸಾಧಿಸುತ್ತಾರೆ. Really grt

    ReplyDelete

ಬೂತ್ ಮಟ್ಟದಲ್ಲಿ ಸಂಘಟನೆಗೆ ಕಾಂಗ್ರೇಸ್ ಗಾಂಧಿ ನಡೆ

ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...